          ಧರ್ಮಚೈತನ್ಯವಾದ		
ಜೀವನ ಗುರಿ ಮಾನವ ತನ್ನ ನೈಜ ಸ್ವಭಾವವನ್ನು ಅರಿಯುವುದು ಮತ್ತು ಸಾಧಿಸುವುದೆ ಹೊರತು ಸುಖಪ್ರೇಯಸ್ಸುಗಳನ್ನು ಪಡೆಯುವುದಲ್ಲ ಎಂದು ಹೇಳುವ ಒಂದು ವಾದ (ಎತಿಕಲ್ ಐಡಿಯಲಿಸಂ).  ಇಂಥ ವಾದಸರಣಿ ಪ್ಲೇಟೊ ಅರಿಸ್ಟಾಟಲ್ ಮುಂತಾದವರಲ್ಲಿ ಅಸ್ಪಷ್ಟವಾಗಿ ಕಂಡುಬಂದರೂ ಅವನ್ನು ಸ್ಪಷ್ಟವಾಗಿ ನಿರೂಪಿಸಿ ಬೇಳೆದÀ ಕೀರ್ತಿ ಚಿತ್ಪ್ರಧಾನವಾದಿಗಳಾದ ಬ್ರಾಡ್ಲೆ ಮತ್ತು ಗ್ರೀನ್ ಎಂಬ ಬ್ರಿಟಿಷ್ ನೀತಿ ಶಾಸ್ತ್ರಜ್ಞರಿಗೆ ಸಲ್ಲುತ್ತದೆ..

	ಈ ವಾದದ ತಿರುಳು ಇಷ್ಟು :  ಬ್ರಹ್ಮ ಅತಿಶಯವಾದ ತತ್ತ್ವ. ಅದು ವಿಶ್ವ ಚೈತನ್ಯವಾಗಿದೆ.  ಅದು ಪರಿಪೂರ್ಣ, ಅನಂತ ಹಾಗೂ ಆನಂದಮಯವಾದ್ದು.  ಮಾನವ ಈ ತತ್ತ್ವದ ಒಂದು ಭಾಗವೇ ಆಗಿರುವುದರಿಂದ ಆತ ಅದರೊಂದಿಗೆ ತನ್ನ ಐಕ್ಯವನ್ನು ತಾನೇ ಅನುಭವಿಸಬೇಕು.  ಈ ತಾದಾತ್ಮ್ಯ ಭಾವವನ್ನು ಹೊಂದಲು ಒಂದು ಮಾರ್ಗ ಬೇಕು.  ನೀತಿಯುತವೂ ಸದಾಚಾರಯುತವೂ ಆದ ಜೀವನವೇ ಅದನ್ನು ಪಡೆಯುವ ಮಾರ್ಗ.  ಅದರಿಂದಲೇ ಮುಕ್ತಿ.

	ಧರ್ಮಚೈತನ್ಯವಾದ ಕಾಂಟನ ಬುದ್ಧಿ ಪ್ರಾಮಾಣ್ಯ ವಾದದಿಂದ ಭಿನ್ನವೂ ಶ್ರೇಷ್ಠವೂ ಆಗಿದೆ.  ಇದು ಸುಖ ಮತ್ತು ಪ್ರಯೋಜನ ವಾದಗಳ ದೋಷಗಳನ್ನು ತೋರಿಸಿ, ಮುಕ್ತಿಗೆ ನೈತಿಕ ಜೀವನವೇ ಏಕೈಕ ಮಾರ್ಗವೆಂದು ತಿಳಿಸುತ್ತದೆ.
										(ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ